ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಾರ್ಕಳ: ಮತ್ತೆ ಮರಳುತ್ತಿರುವ ಕನ್ನಡದ ವೈಭವ - ಸುವರ್ಣ ಸಾಹಿತ್ಯ ಸಂಭ್ರಮದಲ್ಲಿ ಡಾ. ಚೆನ್ನವೀರ ಕಣವಿ

ಕಾರ್ಕಳ: ಮತ್ತೆ ಮರಳುತ್ತಿರುವ ಕನ್ನಡದ ವೈಭವ - ಸುವರ್ಣ ಸಾಹಿತ್ಯ ಸಂಭ್ರಮದಲ್ಲಿ ಡಾ. ಚೆನ್ನವೀರ ಕಣವಿ

Thu, 15 Oct 2009 02:40:00  Office Staff   S.O. News Service
ಕಾರ್ಕಳ, ಅ.೧೪: ಕನ್ನಡ ಸಾಹಿತ್ಯ ಸ್ಥಿರವಾಗಿರದೆ ಬದಲಾವಣೆಯೊಂದಿಗೆ ಮುಂದುವರಿಯುತ್ತಿದೆ. ಕನ್ನಡವನ್ನು ಆಡಳಿತಾತ್ಮಕ ದೃಷ್ಟಿಯಿಂದ ಪೂರ್ತಿಯಾಗಿ ಅಳವಡಿಸಲು ಸಾಧ್ಯವಾಗದಿದ್ದರೂ, ಸಾಹಿತಿಗಳು ತಮ್ಮದೇ ಆದ ಚಿಂತನೆ ಅಳವಡಿಸುವಲ್ಲಿ ಯಶಸ್ವಿ ಯಾಗುತ್ತಿದ್ದಾರೆ ಎಂದು ಹಿರಿಯ ಕವಿ ನಾಡೋಜ ಡಾ.ಚೆನ್ನವೀರ ಕಣವಿ ಅಭಿಪ್ರಾಯ ಪಟ್ಟಿದ್ದಾರೆ. 

ಕಾರ್ಕಳದ ಭುವನೇಂದ್ರ ಕಾಲೇಜು ಹಾಗೂ ಬೆಂಗಳೂರು ಕೇಂದ್ರ ಸಾಹಿತ್ಯ ಅಕಾಡಮಿಯ ವತಿಯಿಂದ ಶ್ರೀ ಭುವನೇಂದ್ರ ಕಾಲೇಜಿನ ರಾಮಕೃಷ್ಣ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸುವರ್ಣ ಸಾಹಿತ್ಯ ಸಂಭ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. 

 ಸಾಹಿತ್ಯ ಪರಂಪರೆಯು ಹಿಂದಿನ ಚಲನೆಯನ್ನು ಕಳೆದುಕೊಂಡು ಹೊಸ ತಿರುವು, ಹೊಸ ರೂಪ, ಹೊಸ ಭಾಷೆ ಸೃಜನಾತ್ಮಕ ಪ್ರಯೋಗದ ಮೂಲಕ ಸ್ಥಾಪಕ ಸ್ಥಿತಿಗೆ ಹಿಂದಿರುಗುತ್ತಿದೆ ಎಂದರು.

ಕಳೆದೆರಡು ದಶಕಗಳಲ್ಲಿ ಸಾಹಿತ್ಯ ಕ್ಷೇತ್ರದ ಬೆಳವಣಿಗೆ ಕ್ಷಿಪ್ರಗತಿಯಲ್ಲಿ ನಡೆದಿದ್ದು, ಆಧುನಿಕ ಸಾಹಿತ್ಯ ಚಳವಳಿಗಳು ಐತಿಹಾಸಿಕ, ಸಾಂಸ್ಕೃತಿಕ, ವೈಜ್ಞಾನಿಕ ಹೀಗೆ ಒಂದಕ್ಕೊಂದು ಪೂರಕವಾಗಿ ವೇಗವರ್ಧಕಗಳಾಗಿ ಕೆಲಸ ಮಾಡುತ್ತಿವೆ ಎಂದರು.

 ಪಂಪನ ಕಾಲದ ಸಾಹಿತ್ಯದಲ್ಲಿ ಧರ್ಮನಿಷ್ಠೆ, ಪ್ರಭುನಿಷೆ ತೋರಿದ ಕವಿ ಮನಸ್ಸುಗಳು ಧಾರ್ಮಿಕ ಹಾಗೂ ಲೌಕಿಕ ಕನ್ನಡ ಸಾಹಿತ್ಯ ಪರಂಪರೆಗೆ  ಅತ್ಯಮೂಲ್ಯವಾದ ಕೊಡುಗೆ ನೀಡಿವೆ ಎಂದ ಕಣವಿ,  ಪಂಪನಿಂದ ಪ್ರಾರಂಭವಾಗಿ ಮುಂದೆ ಒಂದುವರೆ ಶತಮಾನದ ಕಾಲ ಹಲವು ಬದಲಾವಣೆಗಳೊಂದಿಗೆ ಶುದ್ಧ ಕನ್ನಡ ಸಿದ್ಧವಾಯಿತು. ೨೦ನೆ ಶತಮಾನದ ೮,೯ರ ದಶಕಗಳಲ್ಲಿ ಹೊಸಗನ್ನಡ ವೈವಿಧ್ಯಮಯವಾಗಿ ಆಧುನಿಕ ಸಾಹಿತ್ಯದ ವೇಗವನ್ನು ಹೆಚ್ಚಿಸಿತು ಎಂದರು.

ಧಾರವಾಡದ ಡಾ.ಸಿದ್ದಲಿಂಗ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಡಾ.ತಾಳ್ತಜೆ ವಸಂತಕುಮಾರ್ ಉಪಸ್ಥಿತರಿದ್ದರು. ಕೆಂದ್ರ ಸಾಹಿತ್ಯ ಅಕಾಡಮಿಯ ಕಾರ್ಯದರ್ಶಿ ಎ.ಎಸ್.ಇಲಾನ್ ಗೋವನ್ ಸ್ವಾಗತಿಸಿದರು. ಡಾ.ಜಯಪ್ರಕಾಶ್ ಮಾವಿನಕುಳಿ ಕಾರ್ಯಕ್ರಮ ನಿರೂಪಿಸಿದರು. ಪ್ರೊ.ಪದ್ಮನಾಭ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ವಿಶ್ವಸ್ಥ ಮಂಡಳಿಯ ಅಧ್ಯಕ್ಷ ಎಸ್. ರಾಜಗೋಪಾಲಾಚಾರ್ ವಂದಿಸಿದರು

Share: